Tuesday, November 30, 2010

ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!

ಘಟನೆ ೧
ಇದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ. ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ಚರ್ಚ್ ಸ್ಟ್ರೀಟ್ ನಲ್ಲಿರುವ ಎಂಪೈರ್ ಹೋಟೆಲ್ ಗೆ ಬೆಳಗಿನ ಜಾವ ಸುಮಾರು ೨-೩೦ ರ ಸುಮಾರಿಗೆ ಪಾನಮತ್ತರಾಗಿ ನುಗ್ಗಿದ ಪುಂಡರ ಗುಂಪೊಂದು ಊಟ ಕೇಳಿದೆ. ಹೋಟೆಲ್ ಮುಚ್ಚಿದ್ದರಿಂದ ಊಟ ಸಿಗದು ಎಂದಿದ್ದಾರೆ ಸಿಬ್ಬಂದಿ. ಇಷ್ಟಕ್ಕೇ ಸಿಟ್ಟಿಗೆದ್ದ ಪುಂಡರು ಹೋಟೆಲ್ಲಿನ ಗಾಜು-ಪೀಠೋಪಕರಣ ಜಖಂಗೊಳಿಸಿದ್ದಲ್ಲದೇ ಸಿಬ್ಬಂದಿಗೂ ಗೂಸಾ ಕೊಟ್ಟಿದ್ದಾರೆ. ಈ ದುಂಡಾವರ್ತನೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾಗಿದ್ದು ಅಂದಿನ ಮುಖ್ಯಮಂತ್ರಿಗಳ ಸುಪುತ್ರ (?) ನಿಖಿಲ್ ಗೌಡ!

ಈ ಸುದ್ದಿ ಮಾಧ್ಯಮಗಳಿಗೆ ತಿಳಿದಿದ್ದೇ ತಡ ಪೊಲೀಸ್ ಕೇಸ್ ಬಹಿರಂಗವಾಗದಂತೆ ನೋಡಿಕೊಂಡರು ಸಿಎಂ ಸಾಹೇಬರು. ಆದರೆ ಮೇಲಿಂದ ಮೇಲೆ ಈ ಸುದ್ದಿ ಎಲ್ಲ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ "ನನ್ನ ಮಗ ಚಿಕ್ಕವ. ಏನೋ ಅರಿಯದೆ ತಪ್ಪೆಸಗಿದ್ದಾನೆ. ಗಾಂಧೀಜಿಯಂಥವರೇ ತಪ್ಪು ಮಾಡಿಲ್ಲವೇ" ಎಂದು ಮಗನನ್ನು ಮಹಾತ್ಮನನ್ನಾಗಿಸಿದರು.

ಘಟನೆ ೨

ಸರಿಯಾಗಿ ತರಗತಿಗೆ ಹಾಜರಾಗದೆ ಅಂಡಲೆಯುತ್ತಿದ್ದ ಮಹಾವೀರ್ ಜೈನ್ ಕಾಲೇಜ್ ವಿದ್ಯಾರ್ಥಿ ನಿಖಿಲ್ ಗೌಡ ನಿಗೆ ಅಗತ್ಯವಿರುವಷ್ಟು ಹಾಜರಾತಿ ಇಲ್ಲದ್ದರಿಂದ ಪರೀಕ್ಷೆಗೆ ಕೂರಲು ಅನುಮತಿ ನಿರಾಕರಿಸಲಾಗಿತ್ತು. ಆಗ ಅವರಿಗೆ ಅನುಮತಿ ದೊರಕಿಸಿ ಪರೀಕ್ಷೆಗೆ ಕೂರುವಂತೆ ಮಾಡಿದ್ದು ಮುಖ್ಯಮಂತ್ರಿ ಅಪ್ಪ!

ಈಗ ದಿನಕ್ಕೊಂದು "ಹಗರಣ" ಹೊರಹಾಕುತ್ತಿರುವ ಮಾಜಿ ಮುಖ್ಯಮಂತ್ರಿಗಳು ಹೋದ ಕಡೆಯಲ್ಲ "ಕಳ್ಳ-ಪೊಲೀಸ್" ಕತೆ ಹೇಳುತ್ತಾ "ಸಾಮನ್ಯನಿಗೊಂದು ಕಾನೂನು -ಸಿಎಂಗೊಂದು ಕಾನೂನಾ" ಎಂದು ಪ್ರಶ್ನಿಸುತ್ತಿದ್ದಾರೆ.

ಹಾಗಾದರೆ ಕುಮಾರಸ್ವಾಮಿ ಅವರ ಪುತ್ರ ಹೋಟೆಲ್ ನಲ್ಲಿ ದಾಂಧಲೆ ನಡೆಸಿದಾಗ, ಪರೀಕ್ಷೆಗೆ ಕೂರಲು ಅರ್ಹತೆ ಇಲ್ಲದಿದ್ದಾಗಲೂ ಪರೀಕ್ಷೆ ಬರೆದಾಗ ಸಿಎಂ ಮಕ್ಕಳಿಗೆ-ಮಾಜಿ ಪಿಎಂ ಮೊಮ್ಮಕ್ಕಳಿಗೆ ವಿಶೇಷ ಕಾನೂನು ಜಾರಿಯಲ್ಲಿತ್ತಾ?

ಅದಕ್ಕೇ ಹೇಳೋದು ಗಾಜಿನ ಮನೆಯಲ್ಲಿ ನಿಂತು ಇನ್ನೊಂದು ಮನೆಯತ್ತ ಕಲ್ಲು ಗುರಿಯಿರಿಸಬಾರದು ಅಂತ.

Labels: , ,

Wednesday, June 02, 2010

ಮತಗಟ್ಟೆಗಳಿಂದ ಪ್ರಜ್ಞಾವಂತರೇಕೆ ದೂರ?

ಈಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಶೇಕಡಾ 80 ರಷ್ಟು ಮತದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ರಸ್ತೆ, ಕುಡಿಯುವ ನೀರು, ಹಾಗೂ ವಿದ್ಯುತ್ ನಂಥ ಮೂಲ ಸೌಕರ್ಯಗಳ ಕೊರತೆ ಇದ್ದರೂ ಇಲ್ಲಿನ ನಮ್ಮ ಮತದಾರರು ಮೈಸುಡುವ ಬಿಸಿಲನ್ನೂ ಲೆಕ್ಕಿಸದೇ ಭಾರಿ ಪ್ರಮಾಣದಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ.

ಇದಕ್ಕೇ ಇರಬೇಕು ಎರಡು ತಿಂಗಳ ಹಿಂದೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಕೇವಲ ಶೇ.44 ರಷ್ಟು ಮತದಾನವಾದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. "ಕಸ ಸಂಗ್ರಹಿಸುವ ಗಾಡಿ ಮನೆ ಮುಂದೆ ನಿಲ್ಲುವ ಸೌಕರ್ಯ ಇರುವಾಗ ಸುಶಿಕ್ಷಿತರು ಎನ್ನಿಸಿಕೊಂಡವರು ಮತದಾನದಿಂದ ದೂರ ಉಳಿದರೆ ಹೇಗೆ" ಎಂದೂ ನಗರದ ಪ್ರಜ್ಞಾವಂತರನ್ನು ಪ್ರಶ್ನಿಸಿದ್ದರು.

ಇದು ಬೆಂಗಳೂರಿನ ಕತೆಯಷ್ಟೇ ಅಲ್ಲ. ಪ್ರಜ್ಞಾವಂತರು ಎನ್ನಿಸಿಕೊಂಡವರು ವಾಸಿಸುವ ದೇಶದ ಯಾವುದೇ ನಗರ-ಪಟ್ಟಣಗಳಲ್ಲಿ ನೀರಸ ಮತದಾನವಾಗುತ್ತಿರುವುದು ಈಚಿನ ಚುನಾವಣೆಗಳಲ್ಲಿ ಮಾಮೂಲಿಯಾಗಿಬಿಟ್ಟಿದೆ.

ಶಾಸನಬದ್ಧವಾಗಿ ದೊರೆತಿರುವ ಮತದಾನದ ಹಕ್ಕು ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಮತಯಂತ್ರದಲ್ಲಿ ಒತ್ತುವ ಒಂದು ಗುಂಡಿಯಿಂದ ಆಗುವ ಪರಿಣಾಮವೇನು ಎಂಬುದು ನಮ್ಮ ಸುಶಿಕ್ಷಿತರು ಎನ್ನಿಸಿಕೊಂಡವರಿಗೆ ಗೊತ್ತಿರುವುದಿಲ್ಲವೇ? ಖಂಡಿತ ಇರುತ್ತದೆ. ಆದರೂ ಅವರು ಮತಗಟ್ಟೆಗಳತ್ತ ಹೋಗಲು ಏಕೆ ಹಿಂಜರಿಯುತ್ತಾರೆ ಎಂಬ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸಮಸ್ಯೆಯ ಇನ್ನೊಂದು ಮಗ್ಗುಲು ತೆರೆದುಕೊಳ್ಳುತ್ತದೆ.

ಬಿಬಿಎಂಪಿ ಚುನಾವಣೆಯಲ್ಲಿ ಈ ಸಲ ಅತ್ಯಂತ ಹೆಚ್ಚು ಕಳಂಕಿತರು ಸ್ಪರ್ಧಿಸಿದ್ದರು. ನಿನ್ನೆ-ಮೊನ್ನೆವರೆಗೂ ಮಚ್ಚು-ಲಾಂಗು ಝಳಪಿಸುತ್ತಿದ್ದವರು ಚುನಾವಣೆ ಘೋಷಣೆಯಾಗಿದ್ದೇ ತಡ ದಿವಿನಾಗಿ ಗರಿಗರಿ ದಿರಿಸು ಧರಿಸಿ ಹಲ್ಲು ಕಿರಿದರು. "ನಮ್ಗೇ ಓಟ್ ಹಾಕ್ಬೇಕು" ಎಂಬ "ಹಕ್ಕೊತ್ತಾಯ" ವನ್ನೂ ಮಾಡಿದರು. ಇದು ಸಾಲದೆಂಬಂತೆ, "ಕಳಂಕಿತರನ್ನು ಜನ ಆಯ್ಕೆ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಬಹಿರಂಗವಾಗಿ ಬೆಂಬಲ ನೀಡಿದ್ದು ಪ್ರಜಾಪ್ರಭುತ್ವದ ಬಗ್ಗೆ ನಮ್ಮ ಜನಪ್ರತಿನಿಧಿಗಳ ಅಭಿಪ್ರಾಯ ತಿಳಿಯುತ್ತದೆ. ಇಂಥ ಹೇಳಿಕೆಗಳಿಂದ ಸಮಾಜಕ್ಕೆ ಎಂಥ ಸಂದೇಶ ರವಾನೆಯಾಗುತ್ತದೆ ಎಂಬುದನ್ನೂ ನಮ್ಮ "ಪ್ರಭು"ಗಳು ಅರಿಯಬೇಕು.

ಹಾಡು ಹಗಲೇ ಹೆಣ ಬೀಳುವ ಬೆಂಗಳೂರಿನಂಥ ನಗರಗಳಲ್ಲಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕುವ ನಾಗರಿಕರು ಮಚ್ಚು ಹಿಡಿದ ಕೈಗೆ ಅಧಿಕಾರ ಒಪ್ಪಿಸಬೇಕೇ?

ನಗರಗಳಲ್ಲಿ ವಾಸಿಸುವ ಬಹುತೇಕರು ಮಧ್ಯಮ ವರ್ಗದ ವಿದ್ಯಾವಂತರು. ಕಳಂಕಿತರ ರಾಜಕೀಯ ಪ್ರವೇಶ, ಕೌಟುಂಬಿಕ ರಾಜಕಾರಣ, ಕಣ್ಣು ಕೋರೈಸುವ ಭ್ರಷ್ಟಾಚಾರ, ಜಾತೀಯತೆಯಂಥ ವಿಚಾರಗಳಿಂದ ಈ ವರ್ಗ ರೋಸಿಹೋಗಿದೆ. ಸ್ವಾತಂತ್ರ್ಯಾ ನಂತರ 60 ವರ್ಷಗಳಲ್ಲಿ ಅನೇಕ ರಾಜಕೀಯ ಪಕ್ಷಗಳನ್ನು ನಾವು ನೋಡಿದ್ದೇವೆ. ಆದರೆ ಈ ದೀರ್ಘಾವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಯಾವ ಪಕ್ಷವೂ ಉತ್ಕೃಷ್ಟ ಅನ್ನುವಂಥ ಆಡಳಿತ ನೀಡಿಲ್ಲ. ನೀಡಿದ್ದೇ ಆಗಿದ್ದರೆ "ಗರೀಬಿ ಹಟಾವೋ" ದಂಥ ಸವಕಲು ವಿಷಯಗಳು ಇನ್ನೂ ಚಾಲ್ತಿಯಲ್ಲಿ ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ಹತ್ತಾರು ಎಕರೆ ಹೊಲ ಇದ್ದವರು ಬೆಂಗಳೂರಿನ ಗಾರ್ಮೆಂಟ್ ಕಾರ್ಖಾನೆಯ ಪುಡಿಗಾಸಿಗೆ ಗುಳೆ ಎದ್ದು ಬರುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾರು ಹಿತವರು ಈ ಎಲ್ಲ ರಾಜಕಾರಣಿಗಳೊಳಗೆ ಎಂದು ಕೇಳುವಂತಾಗಿದೆ.

ಯಾವ ಸರಕಾರ ಬಂದರೂ ಸರಕಾರೀ ಕಚೇರಿಯಲ್ಲಿ ಲಂಚ ಕೊಡೋದು ತಪ್ಪಿಲ್ಲ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಸರಕಾರಿ ಕಚೇರಿಗಳು ಎಂದರೆ ಭ್ರಷ್ಟಾಚಾರದಿಂದ ದುರ್ನಾತ ಬೀರುವ ಸುಲಭ್ ಶೌಚಾಲಯಗಳಾಗಿಬಿಟ್ಟಿವೆ. ಜವಾನನಿಂದ ದಿವಾನನ ವರೆಗೂ ಕಾಸು ಪೀಕಲೇಬೇಕು. ಆಗಾಗ ಲೋಕಾಯುಕ್ತರು ನಡೆಸುವ ದಾಳಿಯಲ್ಲಿ ಅಕ್ರಮವಾಗಿ ಕೋಟಿ ಕೋಟಿ ಗಳಿಸಿದ ಕೊಳಕರು ಬೆತ್ತಲಾಗುತ್ತಿರುವುದೇ ನಮ್ಮ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ನಂಗಾನಾಚ್! ಮೇಲಧಿಕಾರಿ ಹಾಗೂ ರಾಜಕಾರಣಿಯ ನೆರವಿಲ್ಲದೇ ಸರಕಾರಿ ನೌಕರನೊಬ್ಬ ಕೋಟಿಗಟ್ಟಲೇ ಹಣ ಗಳಿಸುವುದು ಸಾಧ್ಯವೇ? ಬೆಕ್ಕಿಗೆ ಗಂಟೆ ಕಟ್ಟುವರಾರು?

ಬೆಂಗಳೂರಿನ ಒಟ್ಟು ಮತದಾರರ ಸಂಖ್ಯೆ ಸುಮಾರು 70 ಲಕ್ಷ. ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದವರು ಕೇವಲ 33 ಲಕ್ಷ. ಅಂದರೆ 37 ಲಕ್ಷ ಮತದಾರರು ಮತದಾನ ಧಿಕ್ಕರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ. ಆದರೆ ಬೆಂಗಳೂರಿನ ಶೇ.56 ರಷ್ಟು ಮತದಾರರು ಚುನಾವಣೆಯಿಂದ ದೂರ ಉಳಿದಿದ್ದಾರೆ ಎಂದರೆ ಪ್ರಸಕ್ತ ರಾಜಕೀಯ ವ್ಯವಸ್ಥೆಯ ಬಗ್ಗೆ ಜನ ನಂಬಿಕೆ ಕಳೆದುಕೊಂಡಿದ್ದಾರೆ ಎಂದರ್ಥವೇ? ಇದು ಗಂಭೀರವಾಗಿ ಚಿಂತಿಸಬೇಕಾದ ವಿಷಯ.

ಇದು ಮಾಹಿತಿ ಯುಗ. ವಿಧಾನಸಭೆ-ಲೋಕಸಭೆಗಳಲ್ಲಿ ನಡೆಯುವ ಕಲಾಪಗಳ ನೇರಪ್ರಸಾರವನ್ನು ವೀಕ್ಷಿಸುವ, ಆಲಿಸುವ ಸೌಲಭ್ಯವಿದೆ. ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುವ ಶಾಸನಸಭೆಗಳಲ್ಲಿ ನಮ್ಮ ಪ್ರತಿನಿಧಿಗಳೆನ್ನಿಸಿಕೊಂಡವರು ಸ್ವಪ್ರತಿಷ್ಠೆಗಾಗಿ ತೋಳೇರಿಸುವ, ಸಭಾಧ್ಯಕ್ಷರ ಮೇಲೆ ಏರಿ ಹೋಗುವ ದುಂಡಾವರ್ತನೆ ನೋಡುವ ಯಾರಿಗೇ ಆದರೂ ಇವರನ್ನು ಯಾಕಾದರೂ ಆಯ್ಕೆ ಮಾಡಿ ಕಳುಹಿಸುತ್ತೇವೋ ಎಂದು ಅನ್ನಿಸಿರಬಹುದು.

ಚುನಾವಣೆ ದಿನಾಂಕ ಘೋಷಣೆಯಾಗುವುದೇ ತಡ, ನಮ್ಮ ಸ್ವದೇಶಿ-ವಿದೇಶಿ ಸಚಿವರೆಲ್ಲ ಸ್ಥಳೀಯ ಚುನಾವಣಾ ಆಖಾಡಕ್ಕೆ ಧುಮುಕುತ್ತಾರೆ. ರೋಡ್ ಶೋ ಮಾಡುತ್ತಾರೆ, ಅಗತ್ಯ ಬಿದ್ದರೆ ಥಕ ಥೈ ಕೂಡ ಮಾಡಿ(ಸಿ)ಬಿಡುತ್ತಾರೆ. ಮತದಾನ ಹತ್ತಿರವಾದಂತೆಲ್ಲ ಅವರಿಗೆ ಸೈಕಲ್ ಶಾಪ್ ಶಾಮಣ್ಣನೂ ಬೇಕು ಹಣ್ಣಿನಂಗಡಿ ರಾಮಣ್ಣನೂ ಬೇಕು. ಆದರೆ ಫಲಿಂತಾಂಶ ಬಂದದ್ದೇ ತಡ, ಈ ಮಹಾಶಯರು ಜನರನ್ನು ಮಾತನಾಡಿಸುವುದಿರಲಿ, ತಮ್ಮ ಹವಾನಿಯಂತ್ರಿತ ಕಾರಿನ ಕಿಟಕಿಯ ಗಾಜನ್ನೂ ಕೆಳಗಿಳಿಸುವುದಿಲ್ಲ. ದಡ ದಾಟಿದ ಮೇಲೆ ಅಂಬಿಗನ ಹಂಗೇನು?

ಚುನಾವಣೆ ಮುಗಿಯುವವರೆಗೆ ಬೆಲೆ ಏರಿಕೆಯಂಥ ಸೂಕ್ಷ್ಮ ವಿಷಯಗಳನ್ನು ಅದುಮಿಟ್ಟುಕೊಳ್ಳುವ ಸರಕಾರ, ಫಲಿತಾಂಶ ಬಂದಿದ್ದೇ ತಡ ಹಾಲಿನ ದರ, ನೀರಿನ ದರ, ಬಸ್ ದರಗಳನ್ನು ಪೈಪೋಟಿಗೆ ಬಿದ್ದಂತೆ ಏರಿಸುವುದನ್ನು ನೋಡಿದರೆ ಇವರೇನು ಜನರ ಶತ್ರುಗಳಾ ಎಂದೆನ್ನಿಸಿಬಿಡುತ್ತದೆ.

ಜನರನ್ನು ವಂಚಿಸುವ ಕಾರ್ಯದಲ್ಲಿ ಯಾವ ರಾಜಕೀಯ ಪಕ್ಷವೂ ಹಿಂದೆ ಬಿದ್ದಿಲ್ಲ. ಅಧಿಕಾರದಲ್ಲಿದ್ದಾಗ ಎಲ್ಲರೂ ಮಾಡುವ ಕೆಲಸ ಒಂದೇ. ಬೆಲೆ ಏರಿಕೆಯಿಂದ ಕಂಗೆಟ್ಟು ಹೊಟ್ಟೆಗೆ ಕೈ ಹಾಕಿ ಪರ ಪರ ಕೆರೆದುಕೊಳ್ಳುವ ಸರದಿ ಮಾತ್ರ ಮಧ್ಯಮ ವರ್ಗದ ಮಂದಿಯದು.

ನಿನ್ನೆ ಒಂದು ಪಕ್ಷದಲ್ಲಿದ್ದ ವ್ಯಕ್ತಿ ನಾಳೆ ಇನ್ನೊಂದು ಪಕ್ಷದ ಅಭ್ಯರ್ಥಿ. ನಮ್ಮ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವುದನ್ನು ಕಂಡು ಮಂಗನಿಗೂ ನಾಚಿಕೆಯಾಗಿರಬೇಕು. ಇದರ ಮಧ್ಯೆ ರಾಜಕೀಯ ಪಕ್ಷಗಳ "ಕಾರ್ಯಾಚರಣೆ", ಮತದಾನದ ಹಿಂದಿನ ದಿನ ತೋಡುವ ಖೆಡ್ಡಾ ಇಂಥವೇ ಹಲವು ಪ್ರಸಂಗಗಳು ಮತಗಟ್ಟೆಗಳತ್ತ ಪ್ರಜ್ಞಾವಂತರು ಹೋಗಲು ಅಸಹ್ಯಪಟ್ಟುಕೊಳ್ಳುವಂತಾಗಿದೆ.

ನಮ್ಮನ್ನು ಆಳುವವರ ಜ್ಞಾನದ ಬಗ್ಗೆ ಮಾತನಾಡುವುದೇ ಒಂದು ಅಸಹ್ಯ. ಒಬ್ಬ ಜವಾನನಿಗೂ ಕನಿಷ್ಠ ವಿದ್ಯಾರ್ಹತೆ ಎಂಬುದಿರುವಾಗ ಶಾಸನಸಭೆಗಳಿಗೆ ಆಯ್ಕೆಯಾಗುವವರಿಗೆ ವಿದ್ಯಾರ್ಹತೆ, ತಾವು ವಹಿಸಿಕೊಳ್ಳುವ ಇಲಾಖೆ ಬಗ್ಗೆ ಸೂಕ್ತ ಜ್ಞಾನ ಬೇಡವೇ? ಜನಪ್ರತಿನಿಧಿಯಾದವನಿಗೆ ಯಾವ ತಾಲೂಕು ಯಾವ ಜಿಲ್ಲೆಯಲ್ಲಿದೆ ಎಂಬ ಕನಿಷ್ಠ ಜ್ಞಾನವಾದರೂ ಇರಬೇಕಾಗುತ್ತದೆ. "ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಗಾವಲು ಪಡೆ ಇಲ್ಲದಿದ್ದರೆ ಬೆಂಗಳೂರಿನ ಬೀದಿಗಳನ್ನು ಸುತ್ತೋದು ಕಷ್ಟ" ಎಂದು ಹಿರಿಯ ರಾಜಕಾರಣಿಯೊಬ್ಬರು ಬಿಬಿಎಂಪಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದು ಅತಿಶಯೋಕ್ತಿ ಎನ್ನಿಸಿದರೂ ಇದು ನಮ್ಮನ್ನು ಆಳುವವರರ ಜ್ಞಾನದ ಬಗ್ಗೆ ತಿಳಿಸುತ್ತದೆ.

ಪ್ರತೀ ಚುನಾವಣೆಯಲ್ಲಿ ನೀರಸ ಮತದಾನವಾದಾಗಲೂ ಮತದಾನ ಕಡ್ಡಾಯಗೊಳಿಸಬೇಕು ಎಂಬ ಕೂಗು ಕಳೆದ ಐದಾರು ವರ್ಷಗಳಿಂದ ಕೇಳಿ ಬರುತ್ತಿದೆ. ಕಡ್ಡಾಯ ಮತದಾನ ಜಾರಿಯಲ್ಲಿರುವ ಕೆಲ ದೇಶಗಳನ್ನೂ ನಮ್ಮ ಸ್ವದೇಶಿ ರಾಜಕಾರಣಿಗಳು ಹೆಸರಿಸಿದ್ದಾರೆ.

ಕಡ್ಡಾಯ ಮತದಾನದ ಬಗ್ಗೆ ಮಾತನಾಡುವ ನಮ್ಮ ರಾಜಕಾರಣಿಗಳು ಎಂದಾದರೂ ತಮ್ಮನ್ನು
ಆಯ್ಕೆ ಮಾಡಿದ ಮತದಾರರಿಗೆ ಉತ್ತರದಾಯಿಗಳಾಗಿದ್ದಾರಾ? ಕಡ್ಡಾಯದ ಬಗ್ಗೆ ಸೊಲ್ಲೆತ್ತುವವರು ವಿಧಾನಸಭೆ-ಲೋಕಸಭೆಗಳಲ್ಲಿನ ದಂಡಪಿಂಡಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶದ ಬಗ್ಗೆಯೂ ಒತ್ತಾಯಿಸಿದ್ದಾರಾ? ಉಹುಂ, ಖಂಡಿತ ಇಲ್ಲ.

***

ಮತದಾನ ಕಡ್ಡಾಯದ ಬಗ್ಗೆ ಬೊಬ್ಬೆ ಹೊಡೆಯುವ ಜನ ಚುನಾವಣಾ ಆಯೋಗದ 1961 ರ ಚುನಾವಣಾ ವಿಧಿವಿಧಾನ (Conduct of Election Rules)ದ 49(0) ಅವಕಾಶದ ಬಗ್ಗೆ ಏಕೆ ಜಾಣಗುರುಡುತನ ತೋರಿಸುತ್ತಾರೆ? 49(0) ಪ್ರಕಾರ "ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬ ಆಯ್ಕೆಯಾಗಲು ಅನರ್ಹ ಎಂದು ಮತದಾರನಿಗೆ ಅನ್ನಿಸಿದರೆ, ಮತಗಟ್ಟೆ ಅಧಿಕಾರಿ ಬಳಿ ಇರುವ 17 ಎ ಫಾರ್ಮ್ ನಲ್ಲಿ ಮತ ಚಲಾಯಿಸಲು ನಿರಾಕರಿಸಿದ ಬಗ್ಗೆ ನಮೂದಿಸಿ, ರೆಜಿಸ್ಟರ್ ನಲ್ಲಿ ಚುನಾವಣಾ ಗುರುತುಪತ್ರ ಸಂಖ್ಯೆ ಬರೆದು ಸಹಿ ಮಾಡಬೇಕು" ಎಂದಿದೆ. ಭಾರತದ ಚುನಾವಣಾ ಆಯೋಗ ಮತದಾರರಿಗೆ ನೀಡಿರುವ ಅತ್ಯುತ್ತಮ ಅವಕಾಶವಿದು. ಆದರೆ ಮಾಧ್ಯಮಗಳೂ ಸೇರಿದಂತೆ ಯಾರೊಬ್ಬರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸದಿರುವುದು ಆಶ್ಚರ್ಯಕರ.

ಇನ್ನುಮುಂದೆ ಜನ ಮತ ಚಲಾಯಿಸೋಲ್ಲ ಎಂದು ಗದರುವ ಗುಮ್ಮಣ್ಣರಿಗೆ 49(0) ಅವಕಾಶದ ಬಗ್ಗೆ ಮನವರಿಕೆ ಮಾಡಿಕೊಡಬೇಕು.
ಈಗಿರುವ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಬೇಕಾದ ಅಗತ್ಯವಿದೆ. ಮತಯಂತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಹಾಗೂ ಅವರ ಗುರುತಿನ ಚಿಹ್ನೆಯ ಬಳಿಕ ಕೊನೆಯ ಸಾಲಿನಲ್ಲಿ "ಯಾರೂ ಹಿತವರಲ್ಲ" ಅಥವಾ "ಯಾರಿಗೂ ನನ್ನ ಮತವಿಲ್ಲ" ಎಂಬರ್ಥದ ಗುಂಡಿ ಒತ್ತುವ ಅವಕಾಶವಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಏರಿಕೆಯಾದರೆ ಅಚ್ಚರಿಯಿಲ್ಲ. ತನಗೆ ಬೇಕಾಗಿರುವುದನ್ನು ಆಯ್ಕೆ ಮಾಡಲು ಮತದಾರನಿಗೆ ಅವಕಾಶವಿರದಿದ್ದರೆ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಏಕೆ ಮತ ಚಲಾಯಿಸಬೇಕು. ಕೊಳೆತ ಹಣ್ಣುಗಳ ಬುಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಎಂಬಂತಿದೆ ಪ್ರಸಕ್ತ ಎಲೆಕ್ಟ್ರಾನಿಕ್ ಮತಯಂತ್ರದ ವಿನ್ಯಾಸ.

Sunday, November 29, 2009

ಭೇಷ್ ಬಿಬಿಎಂಪಿ!

ಪ್ರತಿದಿನ ಪತ್ರಿಕೆ ತೆಗೆಯುತ್ತಲೇ ಒಂದು ಪುಟದಲ್ಲಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕನಿಷ್ಠ ಒಂದು ದೂರಾದರೂ ಖಂಡಿತ ಇರುತ್ತದೆ.

ಕೆಲ ಪತ್ರಿಕೆಗಳಲ್ಲಿ ಓದುಗರು ಪತ್ರ ಬರೆದು ಹಾಳಾದ ರಸ್ತೆ ಸರಿಪಡಿಸಿ, ಬೀದಿದೀಪ ಹಾಕಿಸಿ, ಬೀದಿನಾಯಿ ಕಾಟ ತಪ್ಪಿಸಿ, ಕಸ ಎತ್ತಿಸಿ ಇಂಥವೇ ನೂರಾರು ದೂರುಗಳೊಂದಿಗೆ ತಮ್ಮ ಸಮಸ್ಯೆಗಳನ್ನು ಹರವಿಕೊಂಡಿರುತ್ತಾರೆ. ಕೆಲವೊಮ್ಮೆ ಇವಾವುವೂ ಇರದಿದ್ದರೆ ಪತ್ರಿಕೆಗಳೇ ಕುಂದುಕೊರತೆಗಳ ಆಕ್ಷೇಪವೆತ್ತುತ್ತವೆ. ಅನೇಕ ಬಾರಿ ಇಂಥ ಆಕ್ಷೇಪಗಳು ಸಾರ್ವಜನಿಕರ ಪರವಾಗಿ ಇದ್ದರೆ ಇನ್ನು ಕೆಲ ಬಾರಿ ಇನ್ನಾರದೋ ಮೇಲೆ ಸಿಟ್ಟು ತೀರಿಸಿಕೊಳ್ಳಲು ಸುದ್ದಿ ಪ್ರಕಟವಾದಂತೆ ಕಾಣುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಬೆಂಗಳೂರಿನ ಮೆಜಸ್ಟಿಕ್ ಸುತ್ತ ಸುಸ್ಸುಕೋರರ (ಗೋಡೆಗೆ ಮೂತ್ರ ವಿಸರ್ಜಿಸುವವರ) ಹಾಗೂ ಎಲ್ಲೆಂದರಲ್ಲಿ ಸಿನಿಮಾ ಪೋಸ್ಟರ್ ಅಂಟಿಸುವವರ ಹಾವಳಿ ವಿಪರೀತವಾದಾಗ ಇದಕ್ಕೆ ಪರಿಹಾರ ಕಂಡುಹಿಡಿಯಲು ಎಲ್ಲಾ ಗೋಡೆಗಳ ಮೇಲೆ ಪ್ರಕೃತಿ ಸೌಂದರ್ಯದ, ಪ್ರವಾಸಿ ತಾಣಗಳ ಸುಂದರ ಚಿತ್ರಕಲೆಗಳನ್ನು ಬಿಡಿಸಲು ಬಿಬಿಎಂಪಿ ನಿರ್ಧರಿಸಿತು. ಅದರಂತೆಯೇ ಕಾರ್ಯರೂಪಕ್ಕೂ ಇಳಿಯಿತು. ಪ್ರಾಯಶಃ ಗೋಡೆ ಅಂದಗೆಡಿಸುವವರನ್ನು ಹತ್ತಿಕ್ಕಲು ಯಾವುದೇ ಮಹಾನಗರ ಪಾಲಿಕೆ ದೇಶದಲ್ಲೇ ಕೈಗೊಂಡ ವಿನೂತನ ಪ್ರಯೋಗವಿದು. ಆದರೆ ಕೆಲ ಪತ್ರಿಕೆಗಳು ಇದರಲ್ಲೂ ಹುಳುಕು ಕಂಡು ಹಿಡಿಯುವ ಪ್ರಯತ್ನ ಮಾಡಿದವು.

ಪತ್ರಿಕೆಗಳಲ್ಲಿ ದೂರುಗಳು ಪ್ರಕಟವಾದಾಗಲೆಲ್ಲ ಬಿಬಿಎಂಪಿ ಅದಕ್ಕೆ ಸ್ಪಷ್ಟೀಕರಣ ನೀಡಿದ್ದು, ಕಾಮಗಾರಿ ಕೈಗೆತ್ತಿಕೊಂಡಿರುವ ಹೇಳಿಕೆ ನೀಡಿದ್ದನ್ನು ನಾವು ಓದುತ್ತೇವೆ. ಆದರೆ, ಬಿಬಿಎಂಪಿ ಸಮಸ್ಯೆಗೆ ಸ್ಪಂದಿಸಿಕ್ಕಿಂತ ದೂರು ಪ್ರಕಟಿಸಿದ ಪತ್ರಿಕೆಯೇ ತನ್ನ ವರದಿಯ ಪರಿಣಾಮ, ಫಲಶ್ರುತಿ ಎಂಬ ಶಹಬ್ಬಾಶ್ ಗಿರಿ ಕೊಟ್ಟುಕೊಂಡಾಗ ಬಿಬಿಎಂಪಿ ಬಗ್ಗೆ ಕನಿಕರಪಟ್ಟಿದ್ದೇನೆ. ಬಿಬಿಎಂಪಿಯದ್ದು ಎಂಥ ಥ್ಯಾಂಕ್ ಲೆಸ್ ಜಾಬ್ ಅಲ್ಲವೇ ಎಂದು ಅನ್ನಿಸಿದ್ದೂ ಇದೆ. ಬೆಂಗಳೂರು ಇರೋವರ್ಗೂ ಬಿಬಿಎಂಪಿಗೆ ಬೈಗುಳ ತಪ್ಪಿದ್ದಲ್ಲ!

ಈಚೆಗೆ ನಮ್ಮ ಬೀದಿಯಲ್ಲಿ ಕಳೆದ ಹಲವಾರು ತಿಂಗಳಿಂದ ಬೀದಿದೀಪವೇ ಇರಲಿಲ್ಲ. ಇದರಿಂದಾಗಿ ಕೆಲ ಮನೆಗಳಲ್ಲಿ ಕಳ್ಳತನವೂ ನಡೆಯಿತು. ಆಗ ನನಗೆ ಹೊಳೆದದ್ದು http://www.bbmponline.org/ ವೆಬ್ ಸೈಟ್. ಸುಮ್ಮನೇ ಒಂದು ಪ್ರಯತ್ನ ಮಾಡೋಣ ಅಂತ ಪಾಲಿಕೆ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳಿಗೆ ಸಮಸ್ಯೆಯನ್ನು ವಿವರಿಸಿ ಒಂದು ಇ-ಮೇಲ್ ಮಾಡಿದೆ. ಆಶ್ಚರ್ಯವೆಂಬಂತೆ ನಾನು ಇ-ಮೇಲ್ ಕಳುಹಿಸಿದ ಮೂರೇ ದಿನಗಳಲ್ಲಿ ನಮ್ಮ ಬೀದಿಯಲ್ಲಿನ ದೀಪಗಳು ರಿಪೇರಿಯಾದವು. ಇದಕ್ಕಿಂತ ಖುಷಿಯ ಸಂಗತಿ ಬೇರೇನಿದೆ ಹೇಳಿ? ಬಿಬಿಎಂಪಿ ಇಷ್ಟು ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇಷ್ಟೇ ಅಲ್ಲ ಈಚೆಗೆ ಬಿಬಿಎಂಪಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಂದ ಇ-ಮೇಲ್ ಬಂದಿದ್ದು, ನಿಮ್ಮ ಬಡಾವಣೆಯಲ್ಲಿ ಬೇರೆ ಯಾವುದಾದರೂ ಸಮಸ್ಯೆಗಳಿದ್ದರೆ ತಿಳಿಸಿ, ಅದನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನೀವೂ ಈ ವಿಳಾಸಕ್ಕೆ ಇ-ಮೇಲ್ ಗೆ ಕಳಿಸಬಹುದು: bbmpalike@gmail.com

ನಿಜಕ್ಕೂ ಬಿಬಿಎಂಪಿ ಅಭಿನಂದನಾರ್ಹ ಅಲ್ಲವೇ?

Wednesday, November 25, 2009

ಅನ್ಯಭಾಷಿಕರಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು?

"ಅನ್ಯಭಾಷಿಕರೇ ಕನ್ನಡ ಭಾಷೆ ಕಲಿಯಿರಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿರಿ. ಕರ್ನಾಟಕ ಕನ್ನಡಿಗರದು, ಕನ್ನಡ ಕಲಿಯದವರಿಗೆ ಇಲ್ಲಿಲ್ಲ ಸ್ಥಾನ..." ಇಂಥ ಅನೇಕ ಕಣ್ಸೆಳೆಯುವ ಘೋಷಣೆಗಳನ್ನು ಬೆಂಗಳೂರಿನಾದ್ಯಂತ ಅನೇಕರು ಓದಿರಬಹುದು. ಆದರೆ ಈ ಘೋಷಣೆಗಳು ಯಾರಿಗೆ?
ಕನ್ನಡಿಗರೇ ಈ ಘೋಷಣೆಗಳನ್ನು ಓದಿದರೆ ಈ ಘೋಷಣೆಗಳ ಸಾರ್ಥಕ್ಯವಾದರೂ ಏನು?
ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಯೊಬ್ಬರು ಅಲ್ಲಿನ ಕನ್ನಡದ ಸ್ಥಿತಿಗತಿಯನ್ನು, ಕನ್ನಡಿಗರ ಕೀಳರಿಮೆಯನ್ನು 'ವಿಜಯ ಕರ್ನಾಟಕ'ದಲ್ಲಿ ಈಚೆಗೆ ಮನಮುಟ್ಟುವಂತೆ ವಿವರಿಸಿದ್ದರು. ಅವರ ವಿವರಣೆಯಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ. ಅನ್ಯ ಭಾಷಿಕರು ಬಾಯಿ ತೆರೆಯುವ ಮುನ್ನವೇ
ಅವರು ಯಾವ ಭಾಷೆ ಮಾತನಾಡುತ್ತಾರೆ ಎಂಬುದನ್ನು ಗ್ರಹಿಸುವ ನಮ್ಮ ಕನ್ನಡಿಗರು ಅವರ ಭಾಷೆಯಲ್ಲೇ ಉಲಿಯಲು ಆರಂಭಿಸಿಬಿಡುತ್ತಾರೆ. ಹೀಗಾಗಿಯೇ ಬೆಂಗಳೂರಿಗೆ ಬಂದ ತಕ್ಷಣ ಬೇರೆ ಭಾಷಿಕರು "ಕನ್ನಡ ಗೋತಿಲ್ಲ" ಎಂಬ ಮಂತ್ರ ಕಲಿತುಬಿಡುತ್ತಾರೆ. ಮುಂದೆ ಹತ್ತು ವರ್ಷ ಇದೇ ಊರಲ್ಲೇ ನೆಲೆಸಿದರೂ ಈ ಮಂತ್ರ ಬಿಟ್ಟು ಅವರಿಗೆ ಬೇರೇನೂ 'ಗೋತಿರುವುದೇ' ಇಲ್ಲ.
ಸಮಸ್ಯೆಯ ಮೂಲ ಕೆದಕುತ್ತ ಹೋದರೆ ಕರ್ನಾಟಕದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಈ ದುಃಸ್ಥಿತಿ ಬರಲು ಕನ್ನಡಿಗರೇ ಕಾರಣ ಎಂಬ ಮಾತು ಸತ್ಯವೆನಿಸುತ್ತದೆ.
ತಮಿಳರು, ಮಲಯಾಳಿಗಳು, ತೆಲುಗರಿಗೆ ತಮ್ಮ ಭಾಷೆಯ ಬಗ್ಗೆ ಇರುವ ಪ್ರೀತಿಯನ್ನು ದುರಭಿಮಾನ ಎಂದು ಜರೆಯುವ ನಾವು ಇದರಿಂದ ಪಾಠವನ್ನು ಏಕೆ ಕಲಿಯುವುದಿಲ್ಲ? ಈ ಮೂರೂ ಭಾಷೆಯವರೂ ಬೆಂಗಳೂರಷ್ಟೇ ಅಲ್ಲ ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ತಮ್ಮ ಭಾಷೆ-ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ. ತಮ್ಮ ಭಾಷೆಯ ಜೊತೆ ಬಾಂಧವ್ಯ ಬೆಸೆಯುವ ಪುಸ್ತಕ, ಪತ್ರಿಕೆ ಹಾಗೂ ಟಿವಿ ಚಾನೆಲ್ ಗಳನ್ನು ಓದುವುದನ್ನು-ನೋಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಕನ್ನಡಿಗರಾದ ನಾವು ಅನ್ಯಭಾಷೆಯನ್ನು ಮಾತನಾಡುವುದನ್ನೇ ದೊಡ್ಡಸ್ತಿಕೆಯಾಗಿಸಿಕೊಂಡಿದ್ದೇವೆ.
ಸುಮಾರು ಹತ್ತು ವರ್ಷಗಳ ಕಾಲ ಚೆನ್ನೈನಲ್ಲಿ ನೆಲೆಸಿದ್ದ ನನಗೆ ಭಾಷೆಯ ಬಗ್ಗೆ ಅಲ್ಲಿನ ತಮಿಳರಿಂದ ಕಲಿಯಬೇಕಾಗಿದ್ದು ತುಂಬಾ ಇದೆ ಎಂಬ ಅನಿಸಿಕೆ ಇದೆ. ನಮ್ಮ ರಾಜ್ಯದಲ್ಲಿ ಇರುವ ಹಾಗೆ ಭಾಷೆಗೊಂದು ಕಾವಲು ಸಮಿತಿ, ಅದಕ್ಕೊಬ್ಬ ಅಧ್ಯಕ್ಷ, ಅವರಿಗೊಂದು ಗೂಟದ ಕಾರು ಇವೆಲ್ಲ ರಗಳೆಗಳು ಅಲ್ಲಿಲ್ಲ. ಅಲ್ಲಿನ ಜನರೇ ದಿನನಿತ್ಯದ ಜೀವನದಲ್ಲಿ ಅಭಿಮಾನದಿಂದ ತಮ್ಮ ಭಾಷೆಯನ್ನು ಬಳಸುತ್ತಿರುವಾಗ, ಅನ್ಯ ಭಾಷಿಕರು ತಮಿಳು ಕಲಿಯದೇ ಅಲ್ಲಿ ಜೀವನ ಮಾಡುವುದು ದುಸ್ತರವೆನಿಸುವ ಸ್ಥಿತಿಯನ್ನು ನಿರ್ಮಿಸಿರುವಾಗ ನಮ್ಮ ರಾಜ್ಯದಲ್ಲಿರುವಂತೆ ಕನ್ನಡವನ್ನು ರಕ್ಷಣೆ ಮಾಡುವ ವೇದಿಕೆಗಳಾಗಲೀ, ಸಂಘಟನೆಗಳಾಗಲೀ ಅಲ್ಲಿ ಇಲ್ಲವೇ ಇಲ್ಲ. ನಮಗಿರುವಂತೆ ತಮಿಳರಿಗೂ ನವೆಂಬರ್ ಒಂದನೇ ತಾರೀಖು ರಾಜ್ಯೋತ್ಸವ. ಆದರೆ ಅಲ್ಲಿ ಎಲ್ಲಿಯೂ ನಮ್ಮಲ್ಲಿರುವಂತೆ ಅದ್ದೂರಿ ಸಮಾರಂಭಗಳಾಗಲೀ, ತಮಿಳು ಬಾವುಟಗಳನ್ನಾಗಲೀ ನೋಡಿದ ನೆನಪಿಲ್ಲ. ಸವಾರಿ ಕೈ ತಪ್ಪಿದರೂ ಚಿಂತೆಯಿಲ್ಲ ಅಪ್ಪಿ ತಪ್ಪಿಯೂ ತಮಿಳು ಬಿಟ್ಟು ಅನ್ಯ ಭಾಷೆ ಮಾತನಾಡಲಾರ ಅಲ್ಲಿನ ಆಟೋಗಾರ. ಆದರೆ ಭಾರಿ ಗಾತ್ರದ ಕನ್ನಡ ಬಾವುಟ ಹಾರಿಸುವ ನಮ್ಮ ಆಟೊ ಅಣ್ಣಂದಿರು ಮಾತು ಆರಂಭಿಸುವುದೇ ಅನ್ಯ ಭಾಷೆಯಿಂದ. 'ನಾವೂ ಕನ್ನಡದವ್ರೇ ಕಣ್ರೀ' ಎಂದರೆ ಮಾತ್ರ 'ಏನ್ಮಾಡೋದ್ ಸಾರ್ ಬೆಂಗ್ಳೂರಲ್ಲಿ ಎಲ್ಲಾ ಬೇರೆ ಲಾಂಗ್ವೆಜ್ ನೋರೇ ತುಂಬ್ಕೊಂಡ್ ಬಿಟ್ಟಿದಾರೆ' ಎಂದು ಕನ್ನಡಕ್ಕೆ ವಾಲುತ್ತಾರೆ.
ಚೆನ್ನೈನ ಐಟಿ ಕಂಪನಿಗಳಲ್ಲೂ ಕೂಡ ತಮಿಳರ ಭಾಷಾ ಪ್ರೇಮ ಕಡಿಮೆಯೇನಿಲ್ಲ. ಕಚೇರಿಯ ಸಮಯದಲ್ಲಿ ಸಮೂಹ ಭಾಷೆಯಾದ ಇಂಗ್ಲಿಷ್ ನಲ್ಲಿ ವ್ಯವಹರಿಸಬೇಕು ಎಂಬ ನಿಯಮವಿದ್ದಾಗಲೂ ಅನ್ಯಭಾಷಿಕರಿದ್ದಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತಮಿಳಿನಲ್ಲೇ ಸಂಭಾಷಣೆ ಸಾಗುತ್ತದೆ.
ಅಷ್ಟೇ ಅಲ್ಲ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ಥಾನದಲ್ಲಿನ ಅಧಿಕಾರಿ ತಮಿಳು ಭಾಷಿಕನಿದ್ದರೆ ಮುಗಿದೇ ಹೋಯ್ತು; ತಮ್ಮದು ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನೂ ಮರೆತು ಒಂದು ನಿರ್ದಿಷ್ಟ ಕೇಂದ್ರದ ಒಟ್ಟು ತಲೆ ಎಣಿಕೆ (ಹೆಡ್ ಕೌಂಟ್)ಯಲ್ಲಿ ಪ್ರಸಕ್ತ ವರ್ಷ ಶೇಕಡಾ 30 ರಷ್ಟು ಸ್ವಭಾಷಿಕರನ್ನು ನೇಮಕ ಮಾಡಿಕೊಂಡಿರುವುದಾಗಿ ಹೇಳಿ ಸ್ವಾಭಿಮಾನ(!) ಪ್ರದರ್ಶಿಸಿದ್ದನ್ನೂ ಗಮನಿಸಿದ್ದೇನೆ.
ಆದರೆ ನಮ್ಮ ಬೆಂಗಳೂರಿನಲ್ಲಿ?
ಕನ್ನಡ ಓದು-ಬರಹವಷ್ಟೇ ಅಲ್ಲ, ಕನ್ನಡದಲ್ಲಿ ಕತೆ-ಕವನ ಬರೆಯುವ ಅನೇಕ ಬರೆಹಗಾರರು ಐಟಿ ಕಂಪನಿಗಳ ಉನ್ನತ ಹುದ್ದೆಗಳಲ್ಲಿದ್ದಾರೆ. ಆದರೆ ಅವರು ಎಂದಾದರೂ ಕನ್ನಡದ ಯುವ ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡಿದ ಅಥವಾ ಕನ್ನಡದ ಉದ್ಯೋಗಿಗಳ ಹೆಚ್ಚಳಕ್ಕೆ ಶ್ರಮಿಸಿದ ನಿದರ್ಶನ ತುಂಬಾ ದುರ್ಲಭ. ಇನ್ನು ಬೇರೆ ರಾಜ್ಯಗಳಲ್ಲಿ ಸಂಸ್ಥೆಯ ವಾತಾವರಣದಲ್ಲಿ ಅಲ್ಲಿನ ಭಾಷೆಗೆ ಪ್ರೋತ್ಸಾಹ ನೀಡಿದಂತೆ ಕನ್ನಡದ ಕಂಪನ್ನು ಇವರು ಬೀರುವುದಂತೂ ದೂರವೇ ಉಳಿಯಿತು. ಇನ್ನು ನಮ್ಮ ಕನ್ನಡಿಗ ಉದ್ಯೋಗಿಗಳಂತೂ ಕನ್ನಡ ಮಾತನಾಡುವುದು, ಕನ್ನಡ ಪತ್ರಿಕೆಗಳನ್ನು ಓದುವುದೇ ಒಂದು ಕೀಳರಿಮೆ ಎಂಬ ಮಟ್ಟಿಗೆ ಬಂದಿದ್ದಾರೆ.
ನೆರೆ ರಾಜ್ಯಗಳಲ್ಲಿ ಅಲ್ಲಿನ ಭಾಷಾ ಪರ ಸಂಘಟನೆಗಳಿಲ್ಲ ಎಂದ ಮಾತ್ರಕ್ಕೆ ನಮ್ಮ ರಾಜ್ಯದಲ್ಲೂ ಅವು ಬೇಡವೆಂದಲ್ಲ. ರಾಜ್ಯದ ರಾಜಧಾನಿಯಲ್ಲಿ ರಾರಾಜಿಸಬೇಕಾಗಿದ್ದ ಕನ್ನಡ ಅವುಡುಗಚ್ಚಿ ಕುಳಿತಿರುವ ಈ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು ಹಾಗೂ ಅವರ ಹೋರಾಟ ಅನಿವಾರ್ಯ. ಅನೇಕ ಸಂದರ್ಭಗಳಲ್ಲಿ ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿಯೇ ಅನೇಕ ಕನ್ನಡಿಗರಿಗೆ ನ್ಯಾಯ ದೊರೆತಿದೆ. ಕನ್ನಡದ ಗಂಧದಾಳಿಯೂ ಸೋಕದ ಕೆಲ ಕಚೇರಿಗಳ ಎದುರು ರಾಷ್ಟ್ರಧ್ವಜಕ್ಕೆ ಸಮಾನವಾಗಿ ಕನ್ನಡ ಧ್ವಜ ಹಾರಾಡುತ್ತಿದೆ. ಸಿಸ್ಕೊ, ಐಬಿಎಂ, ಇಎಂಸಿ, ಆಕ್ಸೆಂಚರ್ ನಂಥ ಬಹುರಾಷ್ಟ್ರೀಯ ಕಂಪನಿಗಳ ಗ್ರಂಥಾಲಯಗಳಲ್ಲಿ ಕನಿಷ್ಠ ಒಂದು ಕನ್ನಡ ಪತ್ರಿಕೆ ಕಡ್ಡಾಯವಾಗಿ ಬರುತ್ತಿದೆ.
ಕನ್ನಡದ ಉಳಿವಿಗೆ-ಉನ್ನತಿಗೆ ಸರಕಾರ-ಸಂಘಟನೆಗಳು ಮಾಡಬಹುದಾದ ಕಾರ್ಯಗಳನ್ನೆಲ್ಲ ಶಕ್ತಿಮೀರಿ ಮಾಡಿವೆ-ಮಾಡುತ್ತಿವೆ. ಆದರೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಕನ್ನಡಿಗರೇ ಅಭಿಮಾನಶೂನ್ಯರಾದರೆ 'ಎನ್ನಡ-ಎಕ್ಕಡಗಳ ಮಧ್ಯೆ ಕನ್ನಡ ಕಳೆದುಹೋಗಿದೆ' ಎಂಬ ಕ್ಷೀಷೆ ಇನ್ನೂ ಹತ್ತಾರು ವರ್ಷ ಸರಿದರೂ ಜೀವಂತವಾಗಿರುತ್ತದೆ.

Tuesday, November 24, 2009

ಕಿರಾಣಿ ಅಂಗಡೀಲಿ ಸಾರಾಯಿ ಮಾರಾಟ!

ಕ್ಷಿಣ ಭಾರತದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರ ಖಾಸಗಿ ಜೀವನದ ಬಗ್ಗೆ ಟಿವಿ ಚಾನೆಲ್ ಒಂದು ಈಚೆಗೆ ಗಾಳಿಮಾತು ಬಿತ್ತರಿಸಿದ ಪರಿಣಾಮ ಘಾಸಿಗೊಂಡ ರೈ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಮಾಧ್ಯಮ ಮಿತ್ರರೊಬ್ಬರು ಬ್ಲಾಗ್ ನಲ್ಲಿ ಬರೆದಿದ್ದಾರೆ.

ತಮ್ಮ ವಿಚಿತ್ರ ತೆವಲುಗಳಿಗೆ ಮಾಧ್ಯಮಗಳನ್ನು ಮಾಧ್ಯಮವಾಗಿ ಉಪಯೋಗಿಸುವ ಪತಕರ್ತರ ಜಾಯಮಾನ ಇಂದು ನಿನ್ನೆಯದಲ್ಲ (ಬೇಸರವೆನಿಸಿದರೂ ಪತ್ರಕರ್ತರ ಬಗ್ಗೆ ಈ ಮಾತು ಹೇಳಲೇಬೇಕಿನಿಸಿದೆ). ಸಾರ್ವಜನಿಕ ಜೀವನದಲ್ಲಿರುವವರೂ ನಮ್ಮಂತೆಯೇ ಮನುಷ್ಯರು ಅವರಿಗೂ ನಮ್ಮ ಮನೆಗಳಲ್ಲಿರುವಂತೆಯೇ ಸಮಸ್ಯೆಗಳಿರುತ್ತವೆ ಎಂಬ ಕನಿಷ್ಠ ಜ್ಞಾನ ನಮ್ಮ ಪತ್ರಕರ್ತರಿಗೆ ಏಕೆ ಇರುವುದಿಲ್ಲ?

ಪ್ರಕಾಶ್ ರೈ ಇನ್ನೊಬ್ಬರನ್ನು ಮದುವೆಯಾಗಿರುವುದು, ನಟನೊಬ್ಬ ಹೇರ್ ಡೈ ಮಾಡಿಸಿಕೊಂಡಿರುವುದು, ನಟಿಯೊಬ್ಬಳು ಸ್ತನ ಚಿಕಿತ್ಸೆ ಮಾಡಿಕೊಂಡಿರುವುದು sheer personal matters! ಇದಕ್ಕೆ TV 1 to 10 ಪತ್ರಕರ್ತರ ಅಪ್ಪಣೆ ಬೇಕೆ?
ಇಂಥ ಸುದ್ದಿಗಳನ್ನು ವರದಿ ಮಾಡುವಾಗ ಇದರಿಂದ ಆಗಬಹುದಾದ ಪರಿಣಾಮ ಅಥವಾ ಜನರಿಗೆ ಯಾವ ರೀತಿಯಲ್ಲಿ ಇದರಿಂದ ಅನುಕೂಲವಾಗುತ್ತದೆ ಎಂಬ ಪತ್ರಿಕೋದ್ಯಮದ ಮೂಲ ಪಾಠದ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಅಚಾತುರ್ಯಗಳು ನಡೆಯುವುದಿಲ್ಲ.

ಟಿಆರ್ ಪಿ, ಪ್ರಸರಣ ಸಂಖ್ಯೆ ಏರಿಸಿಕೊಳ್ಳಬೇಕೆಂಬ ಒಂದಂಶದ ಕಾರ್ಯಸೂಚಿಯೇನಾದರೂ ನಮ್ಮ ಮಿತ್ರರಿಗೆ ಇದ್ದರೆ ತಮ್ಮ ಚಾನೆಲ್-ಪತ್ರಿಕೆಗೆ ಅಂಟಿಕೊಂಡಿರುವ ಸುದ್ದಿ ಎಂಬ ಪದವನ್ನು ತೆಗೆದು ಬೇರೆ ಹೆಸರಿನ್ನಿಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ನಾನು ಓದಿದ ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಓದುಗರು ಬಯಸುವ ಎರಡು ವಿಷಯಗಳೆಂದರೆ ಸೆಕ್ಸ್ ಮತ್ತು ಜ್ಯೋತಿಷ್ಯ. ಸುದ್ದಿ ಹೆಸರಿನಲ್ಲಿ ಇಂಥ ಓದುಗರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸುದ್ದಿ ಪ್ರಕಟಿಸಿದರೆ-ಬಿತ್ತರಿಸಿದರೆ ತಮ್ಮ ಪತ್ರಿಕೆ-ಚಾನೆಲ್ ನ ಹೆಸರನ್ನೂ ಪತ್ರಕರ್ತರು ಬದಲಿಸಿಕೊಳ್ಳಬೇಕು.

ಇಲ್ಲದಿದ್ದರೆ ಕಿರಾಣಿ ಅಂಗಡಿ ಲೈಸನ್ಸ್ ಪಡೆದು ಸಾರಾಯಿ ಮಾರಿದಂತಾಗುತ್ತದೆ!

Friday, November 20, 2009

ತಂದೆ-ತಾಯಿ ಓಳು ಬರಿ ಓಳು!

ಗ್ಗೆ ಕೆಲವೇ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಮಾರಂಭವನ್ನು ನೆನಪಿಸಿಕೊಳ್ಳಿ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಬಳ್ಳಾರಿ ಜಗಜಟ್ಟಿ ಜನಾರ್ಧನ ರೆಡ್ಡಿ ಆಡಿದ ಮಾತನ್ನು ಯಾರಾದರೂ ಕೇಳಿದರೆ ತೊಡೆ ತಟ್ಟಿ ನಿಂತಿರುವ ಈಗಿನ ರೆಡ್ಡಿ ಈತನೇನಾ ಎಂಬ ಅನುಮಾನ ಬರದೇ ಇರದು.
ಸಭೆ ಆರಂಭವಾಗುತ್ತಲೇ ಯಡಿಯೂರಪ್ಪನವರ ಪಾದ ಮುಟ್ಟಿ ನಮಸ್ಕರಿಸಿದ್ದ ಜನಾರ್ಧನ ರೆಡ್ಡಿ ಇವರು ನಮಗೆ ತಂದೆ ಸಮಾನ; ನಿರೀಕ್ಷೆಗೂ ಮೀರಿ ಸರಕಾರದಲ್ಲಿ ತಮಗೆ (ರೆಡ್ಡಿ ಸಹೋದರರಿಗೆ) ಸ್ಥಾನಮಾನ ಕೊಟ್ಟಿದ್ದಕ್ಕೆ ಮಾತೇ ಹೊರಡುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡುವ, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿಕೊಡುವ ಮಾತನಾಡಿದ್ದ ಜನಾರ್ಧನ ರೆಡ್ಡಿ ಇಂದು ಜಟ್ಟಿಯೂ ನಾಚುವಂತೆ ತಂದೆಯ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ ಎಂದರೆ ಸೋಜಿಗವಾಗುತ್ತದೆ.

ಕೇವಲ ಐದು ವರ್ಷಗಳ ಹಿಂದೆ ಬಳ್ಳಾರಿಯ ಈ ರೆಡ್ಡಿಗಳ ಹೆಸರು ಬಳ್ಳಾರಿ-ಸೊಂಡೂರು ಫಾಸಲೆಯಾಚೆಗೆ ಯಾರಿಗಾದರೂ ತಿಳಿದಿದ್ದರೆ ಅದು ಆಂಧ್ರದಲ್ಲಿನ ಅವರ ನೆಂಟರಿಗೆ ಮಾತ್ರ! ರಾಜ್ಯದಲ್ಲಿ ರೆಡ್ಡಿಗಳಿಗಿಂತಲೂ ಹೆಚ್ಚು ರೊಕ್ಕ ಇರುವ ಮಲ್ಯನಂತಹ ಮಂದಿ ಅನೇಕರಿದ್ದಾರೆ. ಆದರೆ ಅವರು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲು ಬಿಜೆಪಿಯಂತಹ ಚಿಮ್ಮು ಹಲಗೆ (spring board) ಸಿಗದಿದ್ದರಿಂದಲೋ ಅಥವಾ ಕೇವಲ ಒಂದು ರಾಜ್ಯಸಭಾ ಸೀಟು ಖರೀದಿಲು ಮಾತ್ರ ಅವಕಾಶ ಸಿಕ್ಕಿದ್ದರಿಂದಲೋ ಅವರು ತಾವಾಯ್ತು ತಮ್ಮ ಉದ್ಯಮವಾಯ್ತು ಎಂಬ ಮಟ್ಟಿಗೆ ಇದ್ದು ಬಿಟ್ಟಿದ್ದಾರೆ.

ಆದರೆ ಪಕ್ಕಾ ವ್ಯಾಪಾರಿ ಬುದ್ಧಿಯ ರೆಡ್ಡಿಗಳಿಗೆ ಸುಷ್ಮಾ ಸ್ವರಾಜ್ ರಂಥ ತಾಯಿ ಸಿಕ್ಕಿದ್ದೇ ತಡ ಬಳ್ಳಾರಿಯಿಂದ ಶುರುವಿಟ್ಟುಕೊಂಡು ಇಂದು ಇಡೀ ರಾಜ್ಯವನ್ನೇ ಆಪೋಷಣ ತೆಗೆದುಕೊಳ್ಳುವಮಟ್ಟಿಗೆ ಬಂದಿದ್ದಾರೆ. ಹೇಗಿದೆ ತಾಯಿಯ ಮಹಿಮೆ?

ಈಗಾಗಲೇ ತಾಯಿಯನ್ನು ಕಳೆದುಕೊಂಡಿರುವ ನಮಗೆ ಸುಷ್ಮಾ ಅವರೇ ತಾಯಿ ಎಂದು ಅಲವತ್ತುಕೊಂಡಿದ್ದ ರೆಡ್ಡಿಗಳು ಮೊನ್ನೆ ಬಿಜೆಪಿ ಭಿನ್ನಮತ ಭುಗಿಲೆದ್ದಿದ್ದಾಗ (ಭುಗಿಲೆಬ್ಬಿಸಿದಾಗ) ಸಾಕ್ಷಾತ್ ಆ ತಾಯಿಯೇ ಭಿನ್ನಮತ ನಿಲ್ಲಿಸುವಂತೆ ಹೇಳಿದರೂ ಹದಿನಾಲ್ಕು ದಿನ ರೆಡ್ಡಿಗಳು ರಚ್ಚೆ ಹಿಡಿದಿದ್ದೇಕೆ?

ಇದೇನಾ ಮಮತೆಯ ತಾಯಿಗೆ ಮುದ್ದಿನ ಮಕ್ಕಳ ಮರ್ಯಾದೆ?

ಅದಕ್ಕೇ ಹೇಳಿದ್ದು ರಾಜಕೀಯದಲ್ಲಿ ತಂದೆ-ತಾಯಿ ಎಲ್ಲ ಓಳು ಬರೀ ಓಳು ಅಂತ!

Friday, November 06, 2009

ಪತ್ರಿಕೋದ್ಯಮ ಮತ್ತು ಜಾತಿ

ಚೆಗೆ ಮಿತ್ರರೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ 'ಯಡಿಯೂರಪ್ಪ ತುಂಬಾ ಮುಂಗೋಪಿ ಕಣ್ರೀ, ಶೆಟ್ಟರ್ ಸಚಿವ ಸ್ಥಾನ ತಪ್ಪಿಸಬಾರದಿತ್ತು ಈಗ ಅನುಭವಿಸುತ್ತಿದ್ದಾರೆ ನೋಡಿ' ಎಂದು ಒಂದೇ ಉಸುರಿನಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ವಿಶ್ಲೇಷಣೆ ಮಾಡಿಬಿಟ್ಟರು.

ಇದೇ ವಿಷಯದ ಬಗ್ಗೆ ಒಂದೆರಡು ನಿಮಿಷ ಮಾತನಾಡಿದಾಗ ಆ ದಿನದ ಪತ್ರಿಕೆಯಲ್ಲಿ ಪ್ರಕಟವಾದ ವಿಶ್ಲೇಷಣೆಯೇ ಅವರ ವಿಚಾರ ಲಹರಿಗೆ ತಳಹದಿಯಾಗಿತ್ತು ಎಂಬುದು ತಿಳಿಯಿತು. ಕಳೆದ ಹಲವಾರು ವರ್ಷಗಳಿಂದಲೂ ಪತ್ರಿಕಾ ಕ್ಷೇತ್ರದಲ್ಲಿರುವ ಆ ನನ್ನ ಮಿತ್ರ ಪತ್ರಿಕೆಯ ಡೆಸ್ಕ್ ಪತ್ರಕರ್ತರ ವರದಿಗಳಿಗೆ ಮಾರು ಹೋಗಿರುವಾಗ ಶ್ರೀಸಾಮಾನ್ಯರ ಪಾಡೇನು?

ಕನ್ನಡದಲ್ಲಿ ಪ್ರಕಟವಾಗುವ ಕೆಲ ಪತ್ರಿಕೆಗಳು ಕಾಗ್ರೆಸ್, ಬಿಜೆಪಿ, ಜನತಾದಳ ಎಂಬ ಪಾರ್ಶ್ವ ವಾಯುವಿಗೆ ತುತ್ತಾಗಿರುವುದು ನಮಗೆಲ್ಲ ಗೊತ್ತೇ ಇದೆ. ಈ ಹಳದಿ ಕಣ್ಣಿನ ಪತ್ರಿಕೆಗಳಲ್ಲೇ ಕೆಲವಕ್ಕೆ ಒಂದೇ ಪಕ್ಷದಲ್ಲಿರುವ ಜಾತಿಯವರಿಗೆ ಮೀಸಲಾದವು. ಅವುಗಳಲ್ಲಿ 'ಕರ್ನಾಟಕದ ನಂಬರ ಒನ್ ಪತ್ರಿಕೆ' ತೋರುತ್ತಿರುವ ಪಾತ್ರ ಆಶ್ಚರ್ಯವೆನಿಸುತ್ತಿದೆ.

ಇಡೀ ಕರ್ನಾಟಕವನ್ನೇ ಒತ್ತೆ ಇಟ್ಟುಕೊಂಡಿರುವ ರೆಡ್ಡಿಗಳ ಸೂತ್ರ ಯಾರ ಕೈಯಲ್ಲಿದೆ ಎಂಬುದು ಜಗಜ್ಜಾಹೀರಾಗಿದ್ದರೂ ನಂಬರ್ ಒನ್ ಪತ್ರಿಕೆ ಮಾತ್ರ ಬೇರೆ ರೀತಿಯಲ್ಲಿ ಚಿತ್ರಣ ನೀಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಗೌರವಾನ್ವಿತ ಸಭಾಪತಿಗಳಾದ ಶೆಟ್ಟರು ಈ ಹಿಂದೆ ಯಡಿಯೂರಪ್ಪನವರನ್ನು ಶಿಕಾರಿಪುರದಲ್ಲಿ ಶತಾಯಗತಾಯ ಸೋಲಿಸಲು ಜನರನ್ನು ಅಟ್ಟಿದ್ದು ತುಂಬಾ ಜನರಿಗೆ ಗೊತ್ತಿಲ್ಲ. ಇಂಥ ಶೆಟ್ಟರಿಗೆ ಮಹಾನ್ ರಾಷ್ಟ್ರೀಯ ನೇತಾರ ಅನಂತಕುಮಾರ್ ಸಾಥ್ ನೀಡುತ್ತಿರುವುದೂ ಅಷ್ಟೇ ಸತ್ಯ. ಸದಾ ಪರದೆಯ ಹಿಂದೆಯೇ ನಿಂತು ಯಡಿಯೂರಪ್ಪ ವಿರುದ್ದ ಬಸವರಾಜ ಪಾಟೀಲ್ ಯತ್ನಾಳ್, ಬಿ.ಬಿ. ಶಿವಪ್ಪ ನಂತಹ ಸ್ವಜಾತಿಯವರನ್ನೇ ಛೂ ಬಿಟ್ಟು ತೀಟೆ ತೀರಿಸಿಕೊಳ್ಳುವ ಅನಂತಕುಮಾರ್ ಈಗ ನವದೆಹಲಿಯಲ್ಲಿ ರಾಜ್ಯದ ಪ್ರಸಕ್ತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರಂತೆ! ಮಗುವಿನ ಕುಂಡೆ ಹಿಂಡಿ ಮತ್ತೆ ಸಮಾಧಾನ ಮಾಡುವ ಕಲೆ ಅನಂತಕುಮಾರ್ ಗೆ ಕರತಲಾಮಲಕ! ವಿಮಾನದಲ್ಲಿ ಕುಮಾರಸ್ವಾಮಿ-ರಾಧಿಕಾ ಅಕ್ಕಪಕ್ಕ ಕುಳಿತು ಮಾರಿಷಸ್ ಗೆ ಹೋದ ವಿಷಯಗಳು ಪತ್ರಿಕೆ ತಲುಪುವಾಗ ಅನಂತಕುಮಾರರ ಕುಟಿಲ ತಂತ್ರಗಳ ಬಗ್ಗೆ ಒಂದೂ ಮಾತನಾಡದ ನಂಬರ್ ಒನ್ ಪತ್ರಿಕೆ ಸಾಲದ್ದೆಂಬಂತೆ 'ಬಿಕ್ಕಟ್ಟಿನಲ್ಲಿ ಅನಂತ ಪಾತ್ರವಿಲ್ಲ' ಎಂಬ ಕ್ಲೀನ್ ಚಿಟ್ ಸಹ ನೀಡಿದೆ. ಅಡ್ರೆಸ್ಸೇ ಇಲ್ಲದವರು ಯಡಿಯೂರಪ್ಪ ವಿರುದ್ಧ ನೀಡುವ ಹೇಳಿಕೆಗಳನ್ನು ನಂಬರ್ ಒನ್ ಪತ್ರಿಕೆ ದೊಡ್ಡದಾಗಿ ಪ್ರಕಟಿಸುವ ಮೂಲಕ ಯಾರಿಂದಲೋ ಶಾಭಾಷ್ ಗಿರಿ ಪಡೆಯುತ್ತಿದೆ ಎಂಬ ಗುಮಾನಿ ಬರುತ್ತಿದೆ.
ಇಂಥ ಪತ್ರಿಕೆಗೆ ಛೆ ಛೆ ಅನ್ನದೇ ಏನೆನ್ನಬೇಕು?

ಪರಿಹಾರ ಕಾಮಗಾರಿ ಎಲ್ಲಿ ನಡೆಯುತ್ತಿದೆ?: ಈಚೆಗೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಕಾಮಗಾರಿ ಎಲ್ಲಿ ನಡೆಯುತ್ತಿದೆ ಎಂದು ಬೆಂಗಳೂರಿನ ಹವಾನಿಯಂತ್ರಿತ ಪಕ್ಷದ ಕಚೇರಿಯಲ್ಲಿ ಕುಳಿತು ಪ್ರಶ್ನೆ ಕೇಳುವ ರಾಜಕಾರಣಿಗಳು, ಝಗಮಗಿಸುವ ಲೈಟ್-ಕ್ಯಾಮರಾ ಎದುರು ಆಸೀನರಾಗುವ ಪತ್ರಕರ್ತರು ಪದೇ ಪದೇ ಕೇಳುತ್ತಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ಹೋಗಿ ಈ ಪ್ರಶ್ನೆಗಳನ್ನು ಕೇಳಿದ್ದರೆ ಅವರು ಹೇಳುವಲ್ಲಿ ಸತ್ಯಾಂಶ ಇರಬಹುದು ಎಂಬ ಸಂಶಯವಾದರೂ ಬರುತ್ತಿತ್ತು. ಆದರೆ ಹವಾನಿಯಂತ್ರಿತ ನಗರಿಯಲ್ಲಿ ಡೆಸ್ಕ್ ರಾಜಕಾರಣ/ಪತ್ರಿಕೋದ್ಯಮ ಮಾಡುತ್ತ ಪರಿಹಾರ ಕಾರ್ಯ ಎಲ್ಲಿ ಎಂದು ಕೇಳಿದರೆ ಅವರಿಗೆ ಉತ್ತರ ಎಲ್ಲಿ ಸಿಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಂದು ವಿಜಾಪುರ ಜಿಲ್ಲೆಯಲ್ಲಿದ್ದರೆ ನಾಳೆ ಗುಲ್ಬರ್ಗದಲ್ಲಿ ಮತ್ತೊಂದು ದಿನ ರಾಯಚೂರು, ಕೊಪ್ಪಳದಲ್ಲಿ ಕೇಂದ್ರ ಮಂತ್ರಿಗಳನ್ನು ಕರೆದುಕೊಂಡು ಸುತ್ತುತ್ತಿರುವುದು ಇವರ ಕಣ್ಣಿಗೇಕೆ ಕಾಣುತ್ತಿಲ್ಲ ಎಂದು ಆಶ್ಚರ್ಯವೆನಿಸುತ್ತದೆ.
ಸಹೃದಯಿ ಮುನಿಯಪ್ಪ: ಈಚೆಗೆ ಉತ್ತರ ಕರ್ನಾಟಕದಲ್ಲಿ ಪರಿಹಾರ ಕಾಮಗಾರಿಗೆ ಚಾಲನ ನೀಡುವ ಸಂದರ್ಭದಲ್ಲಿ ತೆರಳಿದ್ದ ಕೇಂದ್ರ ರೇಲ್ವೆ ಖಾತೆ ಸಹಾಯಕ ಸಚಿವ ಮುನಿಯಪ್ಪ, ಯಡಿಯೂರಪ್ಪ ಕಾರ್ಯವೈಖರಿ ಮೆಚ್ಚಿ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದನ್ನೇ ಕೆಲ ಪತ್ರಿಕೆಗಳು ಬಿಜೆಪಿಗೆ ಕಾಂಗ್ರೆಸ್ ಬೆಂಬಲ ಎಂಬರ್ಥದ ಶೀರ್ಷಿಕೆಯನ್ನು ನೀಡಿದವು. ಮುನಿಯಪ್ಪ ಅಷ್ಟೇ ಅಲ್ಲ ಯಡಿಯೂರಪ್ಪ ಕಾರ್ಯವೈಖರಿ ಮೆಚ್ಚುವ ಎಲ್ಲರೂ ಹೇಳುವ ಮಾತಿದು. ಕಷ್ಟಪಟ್ಟ ಗೆಳಯನೊಬ್ಬ ಸಂಕಷ್ಟದಲ್ಲಿರುವಾಗ ಹೇಳುವ ಸಾಂತ್ವನದ ನುಡಿಗಳೇ ಮುನಿಯಪ್ಪ ಅವರನ್ನು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನೇ ಅಪಾರ್ಥ ಮಾಡಿಕೊಂಡರೆ ಹೇಗೆ.